GANDHADAGUDI FIRST DAY COLLECTION: ಪವರ್ ಸ್ಟಾರ್ ಡಾ.ಪುನೀತ್ ರಾಜ್ಕುಮಾರ್ ನಟನೆಯ ಗಂಧದ ಗುಡಿ ಚಿತ್ರ ಇಂದು ರಾಜ್ಯಾದ್ಯಂತ ತೆರೆಯಲ್ಲಿ ಮೂಡಿದೆ. ಹಾಗೆಯೇ ಪರದೆ ಮೇಲೆ ಪರಮಾತ್ಮನನ್ನು ನೋಡಿ ಅಭಿಮಾನಿಗಳು ಕಣ್ತುಂಬಿಕೊಂಡು ಭಾವುಕರಾದರು. ಬೆಳಗ್ಗೆಯಿಂದಲೇ ಸಿನಿಮಾ ನೋಡಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಗಂಧದ ಗುಡಿ ಮೊದಲ ಶೋ ವೀಕ್ಷಿಸಲು ಬೆಳಗ್ಗೆಯಿಂದಲೇ ಅಭಿಮಾನಿಗಳು ಟಿಕೆಟ್ಗಾಗಿ ಮುಗಿಬಿದ್ದರು. ಟಿಕೆಟ್ ಪಡೆಯಲು ಹರಸಾಹಸವೇ ಪಡಬೇಕಾಯಿತು.
ಚಿತ್ರಮಂದಿರದ ಆವರಣದಲ್ಲಿ ಪುನೀತ್ ರಾಜ್ಕುಮಾರ್ ಅವರ ಬೃಹತ್ ಕಟೌಟ್ ಹಾಕಲಾಗಿತ್ತು. ನಗರದ ಎಲ್ಲೆಡೆ ಅಪ್ಪು ಫೋಟೋಗಳು, ಗಂಧದಗುಡಿ ಸಿನಿಮಾದ ಭಾವಚಿತ್ರಗಳು ರಾರಾಜಿಸಿದವು.ಅಪ್ಪು ಅಗಲಿ ಒಂದು ವರ್ಷ ಕಳೆಯುತ್ತಾ ಬಂದಿದ್ದರೂ ಕೂಡ ಅಭಿಮಾನಿಗಳ ಹೃದಯದಲ್ಲಿ ಶಾಶ್ಚತವಾಗಿ ನೆಲೆಸಿದ್ದಾರೆ. ಪವರ್ ಸ್ಟಾರ್ ಪರದೆ ಮೇಲೆ ಬರುತ್ತಿದ್ದಂತೆ ಅಪ್ಪು.. ಅಪ್ಪು.. ಮತ್ತೆ ಹುಟ್ಟಿಬನ್ನಿ.
ಅಪ್ಪು ಅಮರ ಸೇರಿದಂತೆ ಹಲವು ಘೋಷಣೆಗಳು ಮೊಳಗಿದವು. ಕಾಡಿನ ಸಂಪೂರ್ಣ ವೈಭವ ನೋಡಿದ ಅಭಿಮಾನಿಗಳು ಪುಳಕಿತಗೊಂಡರು. ಸಿನಿಮಾದಲ್ಲಿ ಪರಿಸರ, ಪ್ರಾಣಿ, ಬುಡಕಟ್ಟು ಜನರ ಸಂಪ್ರದಾಯ, ನೃತ್ಯ, ಸಮುದ್ರ, ನೀರಿನಲ್ಲಿ ಅಪ್ಪು ಹೋಗುವ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿದ್ದು, ಅಭಿಮಾನಿಗಳ ಸಂತೋಷಕ್ಕೆ ಕಾರಣವಾಯಿತು.
ಅಪ್ಪು ಪರದೆ ಮೇಲೆ ಬಂದಾಗಲಂತೂ ಅಭಿಮಾನಿಗಳ ಅಭಿಮಾನ ಎಲ್ಲೆ ಮೀರಿತ್ತು. ಪುನೀತ್ ರಾಜ್ಕುಮಾರ್ ನಟನೆಯ ಕೊನೆಯ ಸಿನಿಮಾ ಆದ ಕಾರಣ ಮೊದಲನೇ ದಿನದ ಟಿಕೆಟ್ ಬುಕ್ಕಿಂಗ್ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ ಸಿನಿಮಾ ನಾಳೆ ನೋಡಬೇಕು ಎಂಬ ಬೇಸರದಲ್ಲಿಯೇ ಕೆಲವರು ಹಿಂದಿರುಗಿದ್ದಾರೆ. ಅಲ್ಲದೇ ಅಭಿಮಾನಿಗಳು ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದಾರೆ.ಇನ್ನು ಗಂಧದ ಗುಡಿ ಯ ಮೊದಲ ದಿನದ ಗಳಿಕೆ ೧೦ ಕೋಟಿ ಅನ್ನಲಾಗಿದೆ.
ಚಿತ್ರ ನೋಡಿ ಬಂದ ಎಲ್ಲರೂ ಭಾವುಕರಾಗಿದ್ದರು. ಸಿನಿಮಾ ನೋಡಲು ಇನ್ನು ಕೂಡ ಥಿಯೇಟರ್ಗೆ ಜನರು ಹರಿದುಬರುತ್ತಲೇ ಇದ್ದಾರೆ. ಆದರೆ ಟಿಕೆಟ್ ಸೋಲ್ಡ್ ಔಟ್ ಆಗಿದೆ ಎಂದು ಥಿಯೇಟರ್ನ ಮಾಲೀಕರು ಹೇಳುತ್ತಿದ್ದಾರೆ. ಆದರೂ ಕೂಡ ಅಭಿಮಾನಿಗಳು ಥಿಯೇಟರ್ನತ್ತ ಕಿಕ್ಕಿರಿದು ಬರುತ್ತಲೇ ಇದ್ದಾರೆ.
ಒಟ್ಟಿನಲ್ಲಿ ಅಪ್ಪು ಅಗಲಿಕೆ ಅಭಿಮಾನಿಗಳಲ್ಲಿ ದುಃಖ ತಂದಿದೆ. ಗಂಧದಗುಡಿ ಸಿನಿಮಾ ಬಿಡುಗಡೆ ಹಬ್ಬದ ರೀತಿಯಲ್ಲಿ ವಾತಾವರಣ ಸೃಷ್ಟಿಸಿದೆ. ಗಂಧದಗುಡಿ ಪ್ರತಿಯೊಬ್ಬರೂ ನೋಡುವಂತಹ ಸಿನಿಮಾವಾಗಿದೆ. ಪುನೀತ್ ರಾಜ್ಕುಮಾರ್ ಅವರ ಸಹಜವಾದ ಮುಗ್ದ ನಗು ಮತ್ತೆ ಕಾಡುತ್ತದೆ. ಕಾಡಿನ ಸುಂದರ ವಿಹಂಗಮ ನೋಟ ಬಣ್ಣಿಸಲು ಆಗದು. ಪುನೀತ್ ರಾಜಕುಮಾರ್ ಶ್ರೀಗಂಧದ ನಾಡಿಗೆ ಗಂಧದಗುಡಿ ಎಂಬ ಅನರ್ಘ್ಯ ರತ್ನ ಕೊಟ್ಟು ಹೋಗಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.